ರಚಯಿತರು: .ಶ್ರೀ ತಿಕ್ಕಯ್ಯಾವಧೂತರು
ಯಾರೇನೆಂದರು:
ಯಾರೇನೆಂದರು ನಿಮಗೆ ಸದ್ಗುರುನಾಥ||ಪ||
ಯಾರೇನೆಂದರು ನಿಮಗೆ ಬಾರದಿರಲೀ ಮನೆಗೆ
ಸಾರಿಸಾರಿಗೆ ನಿಮ್ಮ ದಾರಿ ನೋಡುತಲಿರುವೆ||1||
ಜಾರನೆಂಬುವರೇನೋ ಚೋರನೆಂಬುವರೇನೋ
ಪಾರಮಾರ್ಥದ ಸುವಿಚಾರನೆಂಬುವರೇನೋ||2||
ಆಡಿ ಆಡದಲಿರುವೆ ಮಾಡಿ ಮಾಡದಲಿರುವೆ
ಕೂಡಿ ಕೂಡದಲಿರುವೆ ನೋಡಿ ನೋಡದಲಿರುವೆ ||3||
ಬಾಲನಾಗುತೆ ಶ್ರೀಲೋಲನಾಗುತೆ ಗುಣ
ಶೀಲನಾಗುತೆ ಮುಕ್ತಿ ಕೀಲುತೋರಿದ ಗುರುವೆ ||4||
ವಸುಧೆಯೋಳ್ಚೇಳ್ಗುರ್ಕಿ ಪಸರಿಸಿ ಬೆಳಗಿದ
ಶಶಿಧರ ಎರ್ರಿತಾತ ಶಿಶುವಾನು ಕರುಣಿಸು.
ನೀನೇ ಕಾಪಾಡು
ನೀನೇ ಕಾಪಾಡೋ ಗುರುರಾಯ-ನಿಮ್ಮ
ಧ್ಯಾನವು ಮರೆಸುವುದು ಅಜ್ಞಾನದ ಪ್ರಾಯ ||ಪ||
ನೀನು ಕೂಡಿರುವಂಥ ಕಾಯ- ಇದ
ನೀನಾಡಿಸಿದಂತೆ ನಾನಾಡುವುದು ನ್ಯಾಯ
ಭಾನುಶತಕೋಟಿ ಸಚ್ಛಾಯ –ಬ್ರಹ್ಮ
ಸ್ಥಾನವು ಹೊಂದದು ಮಾನಸಮಾಯ ||1||
ನಾನಾ ಯೋನಿಗಳಲ್ಲಿ ಬಂದೆ- ಮತಿ
ಹೀನನಾಗಿ ನಾ ಬಹಳ ನೊಂದೆ
ಜ್ಞಾನವು ತಿಳಿಯದು ಮುಂದೆ-ಎನ್ನ
ಮಾನಾಭಿಮಾನವು ನಿನ್ನದು ತಂದೆ ||2||
ಊರಿಗೆ ಹೋಗುತಲಿದ್ದೇ-ಅಲ್ಲಿ
ದಾರಿತಪ್ಪಿ ಘೋರಾರಣ್ಯದಿ ಬಿದ್ದೆ
ಯಾರು ದಿಕ್ಕಲ್ಲವೆಂದಿದ್ದೆ-ಬಂದು
ದಾರಿಯ ತೋರಿದೆ ಕಾರುಣ್ಯನಿಧಿಯೇ ||3||
ವಾದಭೇದಗಳನ್ನು ಮರೆಸೋ-ಭವ
ಬಾಧೆಗಳನ್ನು ಪರಿಹರಿಸೋ
ಸಾಧು ಸಂಗದೊಳೆನ್ನನಿರಿಸೋ
ಶಿವಪಾದಕಮಲದೊಳೆನ್ನ ಬೆರೆಸೋ ||4||
ಧಾತ್ರಿಯೊಳಗೆ ಚೇಳ್ಳಗುರ್ಕಿ ಪುಣ್ಯ
ಕ್ಷೇತ್ರವು ಗಳಿಸಿದೆ ಎರ್ರಿತಾತನ ಹುಡುಕಿ
ಸ್ತೋತ್ರ ಮಾಡುವುದೆಲ್ಲ ಹರಕೆ-ಈ
ಗಾತ್ರವಿರುವತನಕ ತೀರದೀ ಬಯಕೆ ||5||
ಗುರುರಾಯ
ಗುರುರಾಯ ಸದ್ಗುರುರಾಯ- ನಿಮ್ಮ
ಚರಣವ ನಂಬಿದೆ ಚಿರಕಾಯ
ಅರಿಯದೆ ಬಂದೆನು ಜನ್ಮಕ್ಕೆ-ನಾ
ಗುರಿಯಾದೆನು ಈ ಕರ್ಮಕ್ಕೆ
ಕರುಣಿಸದಿರುವೆ ಏತಕ್ಕೆ-ನಾ
ಶರಣೆಂದು ನಿಮ್ಮ ಮೊರೆಹೊಕ್ಕೆ
ಗುಂಭದ ಮೋಸಗಾರರನು –ಆ
ಡಂಭಕ ವೇಷದ ಚೋರರನು
ನಂಬದೆ ಬಂದಿಹೆ ನಿನ್ನೆಡೆಗೆ-ನಿನ್ನ
ಹಂಬಲಹಿಡಿಸಿ ಪೊರೆಯನ್ನ
ಎಲ್ಲ ಸಾಧುರೊಳಗಾಡಿದೆನು-ಅವ
ರೆಲ್ಲರ ಚರ್ಯೆಯ ನೋಡಿದೆನು
ಸಲ್ಲದವರ ಬಿಡನಾಡಿದೆನು-ನಿಜ
ಬಲ್ಲಂಥ ಗುರುವಿನ ಕೂಡಿದೆನು ||3||
ಕಡೆಗಾಲಕ್ಕೆ ನೀ ದೊರೆತೆ –ಎನ್ನ
ಕಡೆಯಾಯಿಸು ಕರುಣಾಶರಧಿ
ಪಿಡಿದೆನು ನಿಮ್ಮನ್ನು ದೃಢತರದಿ-ನಾ
ನುಡಿದೆನು ಗುರುನೀ ನುಡಿಸಿದ ತೆರದಿ ||4||
ಕ್ಷಿತಿಯೊಳು ಚೇಳ್ಗುರ್ಕಿ ಪುರವಾಸ-ನಿಜ
ಯತಿಗಳು ಕೂಡವ ಕೈಲಾಸ
ಪ್ರತಿ ಎರ್ರಿತಾತನೇ ಕೊಡುಲೇಸ-ನಿಜ
ಮತಿಯೊಳು ಮರೆಯದೆ ನಿಮ್ಮಧ್ಯಾಸ ||5||
ಗುರುಬಂದ
ಗುರುಬಂದ ಗುರುಬಂದ ಗುರುಬಂದ ಮನೆಗೆ
ಗುರು ಎರ್ರಿತಾತನು ತಾ ಬಂದ ಮನೆಗೆ ||ಪ||
ಎಂದೂ ಬಾರದ ಗುರುವು ಇಂದಿಗೆ ಬಂದಾ
ಆನಂದ ಪದವಿಯು ನಿಮಗಾಗಲೆಂದ ||1||
ಕುರುಡರಿಗೆ ಕುಂಟರಿಗೆ ಕಣ್ಣು ಕಾಲ್ಗಳ ತಂದ
ಬರಡು ಗೋವಿನ ಹಾಲು ಕರೆಯುತ್ತ ಬಂದ ||2||
ರನ್ನದ ಹಾವುಗೆ ಚಿನ್ನದ ಜೋಳಿಗೆ
ಪನ್ನಂಗಧರ ಶಿವನು ತಾ ಬಂದ ಮನೆಗೆ ||3||
ಸಾಕ್ಷಾತ್ತಾಗಿ ಗುರುವು ತಾನೆ ಭಿಕ್ಷಕೆ ಬಂದ
ಮೋಕ್ಷವನು ಕೊಡುವಂಥ ತಾತಾ ತಾ ಬಂದ ||5||
ಧರೆಯೊಳು ಚೇಳ್ಗುರ್ಕಿ ಮಂದಿರವ ಮಾಡಿದ
ಅರಿತ ಭಕ್ತರಿಗೆ ವರಗಳ ನೀಡಿದ ||6||
ಬಂದನೆ ಗುರುತಾತ
ಬಂದನೆ ಗುರುತಾತ ನಮ್ಮನೆಗೆ ||ಪ||
ಎಂದಿನ ಸುಕೃತವೊ ಇಂದಿಗೆ ಒದಗಿತು ||ಅ||
ಬಂದನೆ ಅಮೃತವ ತಂದನೆ ಸೇವಿಸು
ಎಂದನೆ ಪರಮಾನಂದದಿ ಭವಹರ||1||
ಅಂದರೆ ಅನಲಿ ನಿಂದೆಯು ಬರಲಿ
ಚೆಂದಾಗಿ ಗುರುಪಾದ ಹೊಂದಿದೆ ಮನದೊಳು ||2||
ತಂದೆ ತಾಯಿ ಗುರು ಬಂಧುಬಳಗ ಗುರು
ಬಂದ ಸಂಕಟ ಸಂದೇಹ ಬಿಡಿಸುವ ||3||
ಮಂದಮತಿಗಳಿಗೆಂದಿಗೆ ದೊರೆಯನು
ಇಂದುಧರ ಕೃಪಾಸಿಂಧುವೆ ಪುರಹರ
ಸುಂದರ ಚೇಳ್ಗುರ್ಕಿ ಮಂದಿರ ಮಾಡಿದ
ನಂಬಿದ ಭಕ್ತರ ಹೊಂದಿದ ಎರ್ರಿತಾತ ||ಪ||
ಹೇಗೆ ಮರೆಯಲೋ
ಹೇಗೆ ಮರೆಯಲೋ ತಾತನ ಹೇಗೆ ಮರೆಯಲೋ ||ಪ||
ಭೋಗವಿಷಯಗಳನು ತ್ಯಜಿಸಿ
ತ್ಯಾಗವರುಹಿದ ಶ್ರೀ ಗುರುವೇ ನಿಮ್ಮ ||ಅ||
ಜ್ಞಾನವೆಂಬೋ ಪರಮಾಮೃತದ
ಪಾನವನ್ನು ಕುಡಿಸಿ ಶರೀರದ
ಮಾನ ಅಭಿಮಾನವನು ಬಿಡಿಸಿ
ಆನಂದದಿ ಮೈ ಮರೆಸಿದ ತಾತನ ||1||
ರಾಗದ್ವೇಷಾದಿ ಗುಣಗಳನೆಲ್ಲ
ನೀಗಿ ನಿರ್ಭೈಲಾದ ಶಿವನ
ಯೋಗವನ್ನು ತಿಳುಹಿ ಭವ
ರೋಗವನ್ನು ಕಳೆದ ಸದ್ಗುರುವಿನ ||2||
ಮಾರುತಾ ಮನ ಮಾತುಗಳನು
ಮೀರಿದಂಥ ಪರಮಾತ್ಮನೊಳು
ಸೇರಿ ಮತ್ತೆ ನರಜನ್ಮಕ್ಕೆ
ಬಾರದಂತೆ ಮಾಡಿದ ತಾತನ ||3||
ದಾಂತಿಯನ್ನು ಹಿಡಿಸಿ ಮಾಯ
ಭ್ರಾಂತಿಯನ್ನು ಬಿಡಿಸಿ ಮುಕ್ತಿ
ಕಾಂತೆಯೆನಗೆ ಮದುವೆಯಮಾಡಿ
ಶಾಂತಿಸುಖದೊಳಿರಿಸಿದ ತಾತನ ||4||
ದಾರುಣಿಯೋಳ್ ಚೇಳ್ಳಗುರ್ಕಿ-ಉ
ದ್ದಾರಮಾಡಿದ ಶ್ರೀ ಎರ್ರಿತಾತ
ಕೋರಿದವರಿಗೆ ಕೊರತೆಯಿಲ್ಲ
ಧೀರತಿಕ್ಕಯ್ಯ ಮಗನೆಬಲ್ಲ.||5||
ಸರ್ವಾಂತರ್ಯಾಮಿ
ಎಲ್ಲರೊಳಗಿರ್ದಿಲ್ಲದೇ ಜಗ
ವೆಲ್ಲ ಶೋಧಿಸಿ ಕಾಣ್ವನೆ ||ಪ||
ಎಲ್ಲಿ ನೋಡಲು ಅಲ್ಲಿ ಚಿತ್ಕಳೆ
ಯಲ್ಲಿ ತಾ ಮುಳುಗಾಡ್ವನೆ
ಕಲ್ಲುಮುಳ್ಳೊಳು ಕಾಡುಕಷ್ಠಗಳೆಲ್ಲ
ಬೆಳಕನೆ ಮಾಡ್ವನೆ ! ||1||
ಅಲ್ಲ ಅಹುದದು ಇಲ್ಲ ಉಂಟದು
ಒಲ್ಲೆ ಬೇಕೆಂದು ಕಾಡ್ವನೆ ?
ಬಲ್ಲಜ್ಞಾನಿಯ ಸೊಲ್ಲು ಬೇರಿದೆ
ಖುಲ್ಲ ಜನರಂತೆ ಕಾಣ್ವನೆ ? ||2||
ಮಾರುತಾಮನ ಮಾತುಗಳನು
ಮೀರಿದಾ ಘನಧೀರನೆ
ಮೇರು ಶಿಖರವನೇರಿ ಉನ್ಮನಿ
ಸೇರಿದಾ ಸುಖಸಾರನೆ ||3||
ಸೂರ್ಯನಂತೆ ಸರ್ವಸಾಕ್ಷಿಲಿ
ಕಾರ್ಯಕಾರಣ ಭೂತನೆ
ವೀರ್ಯಜಿತರಿಗೆ ತೂರ್ಯತೋರಿದ
ಆರ್ಯಗುರು ಎರ್ರಿತಾತನೆ ||4||
ದೇಶಕಧಿಕ ಚೇಳ್ಳಗುರ್ಕಿ
ವಾಸಮಾಡಿದ ಈಶನೆ
ದಾಸತಿಕ್ಕಯ್ಯ ಕೂಸಿನೊಳುನಿಧಿ
ಧ್ಯಾಸ ಸುಪ್ರಕಾಶನೆ ||5||
ನಾವು ನರರಲ್ಲ
ನರರಲ್ಲೋ ನಾವು ನರರಲ್ಲ-ಶಿವ
ಶರಣರೆಲ್ಲರು ನೀವು ಕರುಣಿಸಿ ಕೇಳಿರಿ ||ಪ||
ಅರಿವಿಗೆ ಅರಿವಾಗಿ ಮರವೆಗೆ ದೂರಾಗಿ
ಅರಿವು ಮರೆವಿಗೆ ಸಾಕ್ಷಿ ಪರವಸ್ತು ತಾನಾಗಿ||1||
ಅಂಗದಲಿ ಲಿಂಗಾಗಿ ಲಿಂಗದಲಿ ಅಂಗಾಗಿ
ಅಂಗಲಿಂಗ ಸಂಗಸಮರಸದೊಳು ನಿಂದ ||2||
ಬಯಲಿಗೆ ಬಯಲಾಗಿ ಬಯಲು ಬ್ರಹ್ಮವತೋರಿ
ಕೈಲಾಸ ವೈಕುಂಠ ಪರಸ್ಥಲ ಮಾಡಿದ ||3||
ಕಣ್ಣಿದ್ದು ಕುರುಡರು ಕಿವಿಯಿದ್ದು ಕಿವುಡರು
ಕಾಲಿದ್ದು ಕುಂಟರು ಕಾಲಸಂಹರರು ||4||
ಧರೆಯೊಳು ಚೇಳ್ಗುರ್ಕಿ ಗುರು ಎರ್ರಿತಾತನ
ಚರಣವ ನಂಬಿದ ಶರಣಸಂತತಿಗಳು ||5||
ಏನಾರ ಮಾಡಯ್ಯ
ಏನಾರ ಮಾಡಯ್ಯ ನೀನು- ಮಹಾ
ದಾನಿ ಶ್ರೀ ಎರ್ರಿಸ್ವಾಮಿ ನಿನ್ನಾಳು ನಾನು ||ಪ||
ಆಳಿನ ಅಭಿಮಾನ ಅರಸನಿಗೆ – ಭಿಕ್ಷದ
ಜೋಳಿಗೆ ಅಭಿಮಾನ ಕೊಟ್ಟ ಗುರುವಿಗೆ ||1||
ವೀಳ್ಯದ ಅಬಿಮಾನ ಎತ್ತಿದವಂಗೆ- ಕರಿಮಣಿ
ತಾಳಿಯ ಅಭಿಮಾನ ಕಟ್ಟಿದ ಗಂಡನಿಗೆ ||2||
ಎನ್ನ ಕಾಯುವುದು ನಿನ್ನಯ ಬಿರುದು- ನಾ
ನಿನ್ನೆಷ್ಟು ಹೇಳಲಿ ಅಭಿಮಾನ ತೊರೆದು ||3||
ಎನಗೆ ನೀಕೊಟ್ಟ ವರವಿಹುದು- ನೀ
ಬೆನ್ಹತ್ತಿ ಇರುತಿರೆ ನಾ ಧನ್ಯನಹುದು ||4||
ತೂಗಿರಿ ಗುರುವಿನ
ತೂಗಿರಿ ಗುರುವಿನ ತೂಗಿರಿ ಪರಮನ
ತೂಗಿರಿ ನಿರ್ವಾಣ ನಿರ್ಮಲನ-ಶಿವ
ಯೋಗಿಯ ಚರಣಕೆ ಬಾಗಿ ಶಿರವನ್ನು
ನೀಗುವ ಭವದ ರೋಗಂಗಳ ||ಪ||
ಜಾಗರದಿಂದಲಿ ಜೋಗುಳವನೆ ಪಾಡಿ
ಬೇಗನೆ ಭಕ್ತರು ತೂಗಿರಿ ||ಅ||
ಜ್ಯೋತಿಸ್ವರೂಪನ ಜಾತಾವಧೂತನ
ಪ್ರೀತಿಯಿಂದಲಿ ನೀವು ತೂಗಿರಿ
ಪಾತಕಂಗಳನಳಿದು ಖ್ಯಾತನಾದಾತನ
ಭೂತಳಕಧಿಕನ ತೂಗಿರಿ ||1||
ಒಳಹೊರಗೆನ್ನದೆ ಕಳೆಕೋಟಿತೇಜನ
ಒಳಪೊಕ್ಕು ನೋಡಿ ನೀವು ತೂಗಿರಿ
ಇಳಿಯೊಳಗೆ ತಾನು ಬೆಳಗುವ ಮೂರ್ತಿಯ
ತಿಳಿದು ನಿಂತವರೆಲ್ಲ ತೂಗಿರಿ ||2||
ಸನ್ಮಾನದಿ ಗುರುಕೃಪೆಯನ್ನು ಪಡೆದವರು
ಚೆನ್ನಾಗಿ ಪಾಡುತ ತೂಗಿರಿ
ತನ್ಮಯವಾದ ಸದ್ಗುರು ಸಾಧನೆಯೊಳು
ಅನುಮಾನವಿಲ್ಲದೆ ತೂಗಿರಿ ||3||
ಭಕ್ತರ ಬಂಧುವಿನ ಮುಕ್ತಿದಾಯಕನ
ವ್ಯಕ್ತಾನಂದನ ತೂಗಿರಿ
ಭಕ್ತಿಭಾವದಿಂದ ಭರಿತರಾಗಿ ಸುವಿ
ರಕ್ತ ಸದ್ಗುರಿವನ ತೂಗಿರಿ ||4||
ಲೋಕದೆಲ್ಲೆಡೆಯಲ್ಲಿ ಏಕವಾಗಿರುವಂಥ
ಸಾಕಾರಮೂರ್ತಿಯ ತೂಗಿರಿ
ನೂಕಿ ಇಂದ್ರಿಯಗಳ ಜೋಕೆಯಿಂದ ಪೋಗಿ
ಲೋಕೈಕ ಗುರುವಿನ ತೂಗಿರಿ ||5||
ಮುತ್ತು ಮಾಣಿಕ್ಯದ ರತ್ನದ ಪ್ರಭೆಯೊಳು
ಚಿತ್ತ ಶುದ್ದದಿ ನೀವು ತೂಗಿರಿ
ನಿತ್ಯನಾದದೊಳು ನಲಿನಲಿದಾಡುತ್ತ
ಉತ್ತಮರೆಲ್ಲರು ತೂಗಿರಿ ||6||
ಕುಂಡಲಿ ಒಲಿದಂಥ ಪಂಡಿತರೆಲ್ಲರ
ಖಂಡಮೂರುತಿ ಎಂದು ತೂಗಿರಿ
ಮಂಡಲತ್ರಯಮಧ್ಯ ತಂಡತಂಡದಿ ಜ್ವಲಿಪು
ದ್ದಂಡ ಜ್ಯೋತಿಯ ತೂಗಿರಿ ||7||
ಮೇಲುಗಿರಿಯಲ್ಲಿ ಲೀಲೆಯಿಂ ಬೆಳಗುವ
ಬಾಲಬ್ರಹ್ಮನೆಂದು ತೂಗಿರಿ
ಕಾಲನಭಾದೆಯ ಕಡೆಗೆಮಾಡಿದನೆಂದು
ಕುಲದೀಪನಿವನೆಂದು ತೂಗಿರಿ ||8||
ಸುಷುಮ್ಮದ ಬಯಲೊಳು ಸುಳಿವ ಸುದ್ದಿಯ ಕೇಳಿ
ಸಾಹಾಸ್ರದಳದೊಳು ತೂಗಿರಿ
ಸಾಹಸದೊಳು ಕುಂಬಶ್ವಾಸ ಮಾಡಿದರು
ಸೂಸದೆ ಮನದಲ್ಲಿ ತೂಗಿರಿ||9||
ಆರು ಮೂರರ ಮೀರಿ ತುದಿಗೇರಿದವರು
ಧೀರರೆಲ್ಲರು ನೀವು ತೂಗಿರಿ
ಭಾರವು ತಗ್ಗಿಸಿ ಧಾರುಣಿಗೆ ನೀವು
ಬಾರದವರೆಲ್ಲ ತೂಗಿರಿ||10||
ನರಜನ್ಮದಲ್ಲಿ ಬಂದು ಸ್ಥಿರಮುಕ್ತಿಯನು ಪಡೆದು
ವರಪುತ್ರರೆಲ್ಲರು ತೂಗಿರಿ
ಆರದ ಜ್ಯೋತಿಯಲಿ ಬೆರೆತು ಆಡುವರೆಲ್ಲ
ಗುರುಪುತ್ರರೊಂದಾಗಿ ತೂಗಿರಿ ||11||
ಯತಿಸಿದ್ಧ ಮುನಿಪನ ಸತತ ಭಜನೆ ಮಾಡಿ
ಮತಿವಂತರೆಲ್ಲರು ತೂಗಿರಿ
ತಾತನ ದಯೆಯಿಂದ ಧನ್ಯರಾದೆವೆಂದು
ಮಾತುಮಾತಿಗೆ ನೀವು ತೂಗಿರಿ ||12||
ದೇಶಕಧಿಕವಾದ ವರಚೇಳ್ಳಗುರ್ಕಿಯ
ವಾಸ ಸದ್ಗುರುವಿನ ತೂಗಿರಿ
ಆಶೆಯನೀಗುವ ವರಗಳ ಕೊಡುವಂಥ
ಈಶ ಎರ್ರಿತಾತನ ತೂಗಿರಿ ||13||
ಪರಬ್ರಹ್ಮ ಜೋಗುಳ
ಜೋಜೋ ಪರಬ್ರಹ್ಮರೂಪ- ಜೋಜೋ
ಜೋಜೋ ಸಿದ್ದಯೋಗಿ ಹೃದ್ದೀಪ –ಜೋಜೋ
ಜೋಜೋ ದ್ವೈತಗುಣಾವಳಿ ಲೋಪ
ಯತಿರಾಜ ವಿರಾಜಿತ ಕರ್ಮನಿರ್ಲೇಪ- ಜೋಜೋ||1||
ಅದು ಇದು ಎನ್ನುವ ಅಖಿಳ ತತ್ವವ ಜರಿದು
ವಿದಿತ ಚಿದಾನಂದ ನೀನೆ ಎಂದರಿದು ಜೋಜೋ
ಹೃದಯದಿ ನಂಬಿ ದ್ವೈತಮತಿ ತೊರೆದು
ಸದಮಳ ಜ್ಞಾನಿಯಾಗಿಹೆ ಸುಖಿಮೆರದು-ಜೋಜೋ ||2||
ಭೂತಳದಿ ನರರೂಪವನ್ನು ನೀ ತಳೆದು
ಭೂತಪರಿಚರದ ವಿಸ್ತಾರವನು ತಿಳಿದು-ಜೋಜೋ
ಜಾತಿನಾಮ ಗಳೆಂಬ ಸಂಕಲ್ಪವಳಿದು ಎರ್ರಿತಾತನ
ನೀನೇನಿಸಿದೆ ವಾಸನೆ ಕಳೆದು- ಜೋಜೋ ||3||
ಪರಮಾರ್ಥಸುವಿಚಾರಗೈದು ಬಂಧುರದೀ
ಆರು ಸಮಾಧಿಯ ಸಾಧಿಸಿ ಭರದಿ ಜೋಜೋ
ತೋರುವ ಜಗವೆಲ್ಲ ಮಿಥ್ಯೆಯೆಂದರಿದಾ
ಪಾರಕರ್ಮವನು ವರ್ಜಿಸಿ ಬ್ರಹ್ಮನೇನೀನಾದಿ-ಜೋಜೋ ||4||
ರೂಢಿಯೊಳೆಸೆವ ಸುಕ್ಷೇತ್ರಗಳು
ನೋಡಬೇಕೆಂದು ನೀ ಪಯಣವನು ಮಾಡಿ-ಜೋಜೋ
ಸ್ವಗ್ರಾಮ ಬಿಟ್ಟು ಮಾರ್ಗವನು ಪಿಡಿದು
ನಾಡೊಳು ಚಲಿಸುತ ಮಾಡಿಯಾತ್ರೆಯನು-ಜೋಜೋ|
ಪಿತಮಾತೆ ಜನ್ಮಭೂಮಿಗಳೆಲ್ಲ ಬಿಟ್ಟು
ಕ್ಷಿತಿಯ ಭೋಗವನೆಲ್ಲ ದ್ವೇಷಿಸಿ ಸುಟ್ಟ-ಜೋಜೋ
ಮತಿಯೊಳು ವೈರಾಗ್ಯತಾಳಿ ಗೃಹಬಿಟ್ಟು ಸತ್ಯ
ಯತಿಯೆನಿಸಿದೆ ಬ್ರಹ್ಮನೊಳು ಚಿತ್ತವಿಟ್ಟು-ಜೋಜೋ||6||
ಬೆಳಗುಪ್ಪೆ ಗ್ರಾಮದ ಗುಡ್ಡಕ್ಕೆ ಬಂದು
ನಿಲುವಾದ ಕೋಡುಗಲ್ಲಿನ ಮೇಲೆ ನಿಂದು ಜೋಜೋ
ಬಲವಾಗಿ ಮರುವರುಷದವರೆಗಿದ್ದು ಅಲ್ಲಿ ನಿಲ್ಲದೆ
ಮುಂದಕ್ಕೆ ಬಂದೆ ಮಹಿಮೆಯತೋರ್ದು- ಜೋಜೋ||7||
ಎಣ್ಣೆನದಿಯೊಳು ಕೆಲದಿನ ವಾಸ ಮಾಡಿ
ಬಣ್ಣಗೆಡದೆ ಇದ್ದೆ ನೀರೊಳಗೆ ಕೂಡಿ-ಜೋಜೋ
ಪುಣ್ಯವಂತರು ನಿನ್ನ ಮಹಿಮೆಯ ನೋಡಿ
ಧನ್ಯರಾದರು ಗುರುವೆ ನಿನ್ನ ಕೊಂಡಾಡಿ-ಜೋಜೋ||8||
ನೋಡುತ ಮುಷ್ಟೂರು ಗ್ರಾಮಕ್ಕೆ ಬಂದು
ಗೌಡನಿಗೆ ಮರಣದ ಸೂಚನೆಯ ತಿಳಿಸಿ-ಜೋಜೋ
ಪಾಡಾಗಿ ಕಲ್ಲಬಸವೇಶನ ನಡಿಸಿ
ನಾಡೋಳು ಮೆರೆಸಿದೆ ಲಕ್ಷವ ಬಯಸಿ-ಜೋಜೋ||9||
ಚೆಂದದಿಂದುರವಕೊಂಡೆಗೆ ಪಯಣವಾಗಿ
ಒಂದೆ ಮನದಿ ಗ್ರಾಮನೋಡುತ್ತಾ ಪೋಗಿ-ಜೋಜೋ
ಒಂದು ಭಾವಿಯ ನೀರಿನೋಳು ನೀನು ಮುಳುಗಿ
ಮತ್ತೊಂದು ಭಾವಿಯೋಳು ತೇಲಿದೆ ಶಿವಯೋಗಿ- ಜೋಜೋ||10||
ಮೆರೆವ ಚೇಳ್ಗುರ್ಕಿಯ ಗ್ರಾಮಕ್ಕೆ ಬಂದು
ಪರಿಪರಿ ಮಹಿಮೆಯ ನಡೆಸಿದೆ ನಿಂದು ಜೋಜೋ
ಪರಮ ಶ್ರೀ ಗುರುಶಾಂತ ತೇಜನೀನೆಂದು
ಸ್ಮರಿಸುವೆ ಪಾಲಿಸೈ ಎನ್ನ ದಯಾಸಿಂಧು-ಜೋಜೋ||11||
ಮಂಗಳ
ರಾಗ ನಾಗನಾಮ ಕ್ರಿಯೆ
ಜ್ಯೋತಿ ಬೆಳಗುತಿದೆ ವಿಮಲಪರಂ
ಜ್ಯೋತಿ ಬೆಳಗುತಿದೆ|
ಮಾತು ಮನಂಗಳಿಂದತ್ತತ್ತ ಮೀರಿದ
ಸಾತಿಶಯದ ನಿರುಪಾಧಿಕ ನಿರ್ಮಲ ||ಪ||
ಶಿವಧರ್ಮನಾಳವೆಂತೆಂಬ ಕಂಬದ ಮೇಲೆ
ಸುವಿವೇಕ ಹರದಯಾಬ್ಜ ಪ್ರಣತೆಯೊಳು
ಸವೆಯದ ಸದ್ಭಕ್ತಿ ರಸತೈಲ ತೀವಿದ
ಪ್ರವಿಮಲ ಕಳೆಯಂಬ ವತ್ತಿವಿಡಿದು ದಿವ್ಯ ||1||
ಮುಸುಕಿದ ವಿಷಯ ಪತಂಗ ಬಿದ್ದುರುಳೆ ತಾ
ಮಸಬುದ್ಧಿಯೆಂಬ ಕತ್ತಲೆಯಳಿಯೇ |
ಮಸಗಿ ಸುಜ್ಞಾನವೆಂಬ ಮಹಾಪ್ರಭೆ
ಪಸರಿಸಿ ಮಾಯಾಕಾಳಿಕೆ ಪೊರ್ದದ ||2||
ಪ್ರಣವಾಕಾರದ ಗುಣಮೂರು ಮುಟ್ಟದ
ಗಣನೇಗತೀತಾರ್ಥವನೆ ತೊರುವ
ಅಣುಮಾತ್ರ ಚಲನೆಯಿಲ್ಲದ ಮೋಕ್ಷ ಚಿಂತಾ
ಮಣಿಯೆನಿಸುವ ಶಂಭುಲಿಂಗವೆ ತಾನಾದ||3||
ಶ್ರೀ ಶಿವಯೋಗಿ ಎರ್ರಿಸ್ವಾಮಿಗಳವರ ಗುಣಸ್ತೋತ್ರದ ರಗಳೆ |
||ಕಂದ|| ಸನ್ನುತ ಚೇಳ್ಗುರಿಕೀಶ್ವರ |
ನಿನ್ನ ನಾನೆತ್ತ ಬಲ್ಲೆ ನಾದರುನುತಿಪೇಂ |
ಮನ್ನಿಸು ಮನ್ನುತಿಯಿಂದಂ |
ನಿನ್ನಯ ಪದಕಿಲ್ಲಕೇಡು ಶ್ರೀ ಎರ್ರಿಸ್ವಾಮಿ|| |
ಮಂದಾನಿಲರಗಳೆ |
ಸ್ವಾಮಿ ಶ್ರೀ ಗುರುದೇವ ದಯಾಘನ |
ಸ್ವಾಮಿ ಸದಾಶುಭದಾಯಕ ಪಾವನ |
ಸ್ವಾಮಿ ನಿರಾಮಯ ನಿತ್ಯನಿರಂಜನ |
ಸ್ವಾಮಿ ಸುಧಾಮಯ ಭವಭಯಭಂಜನ |
ಸ್ವಾಮಿ ನತಾಶ್ರಯ ದಿವ್ಯಮನೋಹರ |
ಸ್ವಾಮಿ ಮಹಾಮಹಿಮಾಂಬುಧಿ ಶಶಿಕರ |
ಸ್ವಾಮಿ ಚಿದಾನಂದಾಮೃತ ಪೂರಿತ |
ಸ್ವಾಮಿ ಸದಾಶಿವ ರೂಪವಿರಾಜಿತ |
ಸ್ವಾಮಿ ಸ್ವಾಮಿ ಎರ್ರಿಸ್ವಾಮಿ ಕೃಪಾಕರ |
ಸ್ವಾಮಿ ಯಶೋಧರ ಚೇಳ್ಗುರಿಕೀಶ್ವರ ||10|| |
ಸ್ವಾಮಿ ಸಕಲಸದ್ಗುಣಗಣ ಮಂಡಿತ |
ಸ್ವಾಮಿ ವಿಕಲ್ಪಿತ ಮಾಯಾಭಂಜಿತ |
ಸ್ವಾಮಿ ಸರ್ವಭಕ್ತಾವಳಿ ಪೂಜಿತ |
ಸ್ವಾಮಿ ಪರಮ ವೈರಾಗ್ಯವಿಭೂಷಿತ |
ಸ್ವಾಮಿ ಸತ್ಯ ಸುಜ್ಞಾನ ಪ್ರದೀಪಕ |
ಸ್ವಾಮಿ ನಿತ್ಯ ನಿರ್ಮಲ ನಿಜರೂಪಕ |
ಸ್ವಾಮಿ ನಿರ್ಭಯಾರೂಢನಿಜಾಲಯ |
ಸ್ವಾಮಿ ಉಪಾಧಿರಹಿತ ಜ್ಯೋತಿರ್ಮಯ |
ಸ್ವಾಮಿ ಸ್ವಾಮಿ ಎರ್ರಿಸ್ವಾಮಿ ಕೃಪಾಕರ |
ಸ್ವಾಮಿ ಯಶೋಧರ ಚೇಳ್ಗುರಿಕೀಶ್ವರ ||20|| |
ಸ್ವಾಮಿ ಶರಣಜನ ಕರ್ಮವಿನಾಶಕ |
ಸ್ವಾಮಿ ದುರಿತಜನ ಶಿಕ್ಷಾರಕ್ಷಕ |
ಸ್ವಾಮಿ ವಿಮಲ ಮಹನೀಯಚರಿತ್ರ |
ಸ್ವಾಮಿ ಲೋಕನುತ ದಿವ್ಯಸುಗಾತ್ರ |
ಸ್ವಾಮಿ ಸುಕೃತಸಂಸೇವಿತ ಮಾನಿತ |
ಸ್ವಾಮಿ ದುಷ್ಟಮದಮತ್ಸರಮರ್ದಿತ |
ಸ್ವಾಮಿ ಸಿದ್ಧ ಅವಧೂತಪ್ರಸಿದ್ಧ |
ಸ್ವಾಮಿ ಕರ್ತ ನಿಜತತ್ವ ವಿಶುದ್ಧ |
ಸ್ವಾಮಿ ಸ್ವಾಮಿ ಎರ್ರಿಸ್ವಾಮಿ ಕೃಪಾಕರ |
ಸ್ವಾಮಿ ಯಶೋಧರ ಚೇಳ್ಗುರಿಕೀಶ್ವರ ||30|| |
ಸ್ವಾಮಿ ನಿವೃತ್ತನಿರಂತರನಿಶ್ಚಲ |
ಸ್ವಾಮಿ ದಿಗಂಬರ ನಿರ್ಗುಣನಿಷ್ಕಲ |
ಸ್ವಾಮಿ ಕಾಮಜಿತ ಸಜ್ಜನವಂದಿತ |
ಸ್ವಾಮಿ ಜಟಲಸಂಸಾರ ವಿವರ್ಜಿತ |
ಸ್ವಾಮಿ ಮೌನಮುದ್ರಾಂಕಿತ ರಂಜಿತ |
ಸ್ವಾಮಿ ಶಾಂತಿ ಸುಖಪೂರ್ಣ ವಿಕಾಸಿತ |
ಸ್ವಾಮಿ ಪರಮ ಪಂಚಾಕ್ಷರಿ ನಿಲಯ |
ಸ್ವಾಮಿ ಸ್ಮರಾಂಕುಶ ಭಕ್ತಸುಹೃದಯ |
ಸ್ವಾಮಿ ಸ್ವಾಮಿ ಎರ್ರಿಸ್ವಾಮಿ ಕೃಪಾಕರ |
ಸ್ವಾಮಿ ಯಶೋಧರ ಚೇಳ್ಗುರಿಕೀಶ್ವರ ||40|| |
ಸ್ವಾಮಿ ಜಗನ್ಮಯ ಜೀವಸುಚೇತನ |
ಸ್ವಾಮಿ ಸದಾಗತಿ ಹಂಸನಿಕೇತನ |
ಸ್ವಾಮಿ ಸಾಧುಜನ ಮೋಕ್ಷಪ್ರದಾಯಕ |
ಸ್ವಾಮಿ ಭಜಕರಘುಸಂಹರ ಪಾಲಕ |
ಸ್ವಾಮಿ ವರನಿರಾಭಾರಿ ನಿರಾಕುಲ |
ಸ್ವಾಮಿ ನಿರಾಲಂಬಾಯತಲೋಲ |
ಸ್ವಾಮಿ ವರದನಿರ್ಲೇಪಾಖಂಡಿತ |
ಸ್ವಾಮಿ ಸಮಾಧಿ ಸ್ಥಿತಿಗತಿಸತತ |
ಸ್ವಾಮಿ ಸ್ವಾಮಿ ಎರ್ರಿಸ್ವಾಮಿ ಕೃಪಾಕರ |
ಸ್ವಾಮಿ ಯಶೋಧರ ಚೇಳ್ಗುರಿಕೀಶ್ವರ ||50|| |
ಸ್ವಾಮಿ ಸರ್ವಸ್ವಾತಂತ್ರಸನಾತನ |
ಸ್ವಾಮಿ ಸರ್ವಕಾಲಾದಿವಿನೂತ |
ಸ್ವಾಮಿ ಊರ್ಧ್ವರತಿಭೋಗಪರಾಯಣ |
ಸ್ವಾಮಿ ಕಾಲಗತಿಗನಾಧಿಕಾರಣ |
ಸ್ವಾಮಿ ನಿಗೂಢನಿಗರ್ವ ನಿದರ್ಶಕ |
ಸ್ವಾಮಿ ನಿರಾಶ ನಿರಾಗಸ್ವಭಾವಕ |
ಸ್ವಾಮಿ ಶಕ್ತಿಮಯ ಸಹಜಶಾಶ್ವತ |
ಸ್ವಾಮಿ ವಿವಾದ ವಿವರ್ಜಿತನಿರತ |
ಸ್ವಾಮಿ ಸ್ವಾಮಿ ಎರ್ರಿಸ್ವಾಮಿ ಕೃಪಾಕರ |
ಸ್ವಾಮಿ ಯಶೋಧರ ಚೇಳ್ಗುರಿಕೀಶ್ವರ ||60|| |
ಸ್ವಾಮಿ ಜಟಾಮಕುಟಾಗ್ರ ಸುಶೋಭಿತ |
ಸ್ವಾಮಿ ವಿಶಾಲಫಾಲ ವರಭಸಿತ |
ಸ್ವಾಮಿ ಜಿತೇಂದ್ರಿಯ ತೇಜಸುವದನ |
ಸ್ವಾಮಿ ನಿಗ್ರಹಾನುಗ್ರಹ ಸದನ |
ಸ್ವಾಮಿ ಸಗುಣಘನ ಬ್ರಹ್ಮಸ್ವರೂಪ |
ಸ್ವಾಮಿ ನಿರ್ಗುಣ ಬ್ರಹ್ಮವಿರೂಪ |
ಸ್ವಾಮಿ ನಾದಬಿಂದುಕಲಾ ವಿಲಸಿತ |
ಸ್ವಾಮಿ ನಾದಬಿಂದುಕಲಾ ವಿರಹಿತ |
ಸ್ವಾಮಿ ಸ್ವಾಮಿ ಎರ್ರಿಸ್ವಾಮಿ ಕೃಪಾಕರ |
ಸ್ವಾಮಿ ಯಶೋಧರ ಚೇಳ್ಗುರಿಕೀಶ್ವರ ||70|| |
ಸ್ವಾಮಿ ಸ್ಥೂಲ ಸೂಕ್ಷ್ಮಾಕರ ಕಾರಣ |
ಸ್ವಾಮಿ ಬೃಹನ್ಮಯ ವಿಶ್ವಾವರಣ |
ಸ್ವಾಮಿ ಸರ್ವ ಜೀವಾಂತರ್ಗತಮತಿ |
ಸ್ವಾಮಿ ಸರ್ವ ಜೀವಾನುಗ್ರಹತತಿ |
ಸ್ವಾಮಿ ಜಡಾಜಡ ತತ್ವದಮೂಲ |
ಸ್ವಾಮಿ ನಿಜಾನಜ ವಿಸ್ಮಯಲೀಲ |
ಸ್ವಾಮಿ ಶೂನ್ಯನಿಶ್ಯೂನ್ಯ ನಿಜಾಲಯ |
ಸ್ವಾಮಿ ನಿರ್ವಿಕಲ್ಪಾನಂದಮಯ |
ಸ್ವಾಮಿ ಸ್ವಾಮಿ ಎರ್ರಿಸ್ವಾಮಿ ಕೃಪಾಕರ |
ಸ್ವಾಮಿ ಯಶೋಧರ ಚೇಳ್ಗುರಿಕೀಶ್ವರ ||80|| |
ಸ್ವಾಮಿ ಅವಸ್ಥಾತ್ರಯ ಗತಿದೂರ |
ಸ್ವಾಮಿ ಅಜರಅಕ್ಷರ ಸುವಿಚಾರ |
ಸ್ವಾಮಿ ಅತರ್ಕ್ಯ ಅಗಮ್ಯ ಅಗಾಧ |
ಸ್ವಾಮಿ ಅಮಿತ ಅದ್ವಯ ಅವಿರೋಧ |
ಸ್ವಾಮಿ ಅಚಿಂತ್ಯ ಅಮಲ ಅವಿನಾಶ |
ಸ್ವಾಮಿ ಅಜಾತ ಅಚಂಚಲಧೀಶ |
ಸ್ವಾಮಿ ಸರೂಪ ನಿರೂಪ ಸಮನ್ವಿತ |
ಸ್ವಾಮಿ ಶಬ್ದನಿಶ್ಯಬ್ದ ಸಮಾಹಿತ |
ಸ್ವಾಮಿ ಸ್ವಾಮಿ ಎರ್ರಿಸ್ವಾಮಿ ಕೃಪಾಕರ |
ಸ್ವಾಮಿ ಯಶೋಧರ ಚೇಳ್ಗುರಿಕೀಶ್ವರ ||90|| |
ಸ್ವಾಮಿ ಶಿಷ್ಯ ತಿಕ್ಕಯ್ಯಪ್ರಕಾಶಿತ |
ಸ್ವಾಮಿ ವಿದಿತಶಿವರಾಮ ಭಕ್ತನುತ |
ಸ್ವಾಮಿ ಭಕ್ತಸಂದೋಹ ಮನೋರಥ |
ಸ್ವಾಮಿ ಭಕ್ತಿಮಠವಾಸ ವಿರಾಜಿತ |
ಸ್ವಾಮಿ ದಾಸಜನ ಸ್ವಪ್ನಾಂತರ್ಗತ |
ಸ್ವಾಮಿ ಗುಪ್ತವರದಾಯಕ ನಿರತ |
ಸ್ವಾಮಿ ಸ್ವಾಮಿ ಎರ್ರಿಸ್ವಾಮಿ ಕೃಪಾಕರ |
ಸ್ವಾಮಿ ಯಶೋಧರ ಚೇಳ್ಗುರಿಕೀಶ್ವರ |
ಸ್ವಾಮಿ ಜಯತು ಎರ್ರಿಸ್ವಾಮಿ ನಮೋಸ್ತುತೆ |
ಸ್ವಾಮಿ ನಮೋಸ್ತುತೆ ಸ್ವಾಮಿ ನಮೋಸ್ತುತೆ ||100|| |
||ಕಂ|| ಎಂದಿಂತನುದಿನ ನಿಮ್ಮಂ |
ವಂದಿಸಿ ನುತಿಗೈವ ಭಕ್ತಿಭಾಗ್ಯವನಿತ್ತೀ |
ಕಂದನ ನಿಮ್ಮವನೆನಿಸು |
ತ್ತೆಂದುಂ ಕೈಬಿಡದೆಸಲಹು ಎರ್ರಿಸ್ವಾಮಿ|| |
||ಮಂಗಳ|| |
ಶ್ರೀ ಶಿವಯೋಗಿ ಎರ್ರಿತಾತನವರ ನೂರೆಂಟು ನಾಮಾವಳಿ | ||
||ಕಂದ || ಶ್ರೀಮದಗಜಾಧಿ ನಾಯಕ | ||
ಧಾಮಮದೆನಿಸಿರ್ದುದಾವಮಹಿಮನತಾಣಂ | ||
ಭೂಮಹಿತ ಚೇಳ್ಳಗುರ್ಕಿ | ||
ಗ್ರಾಮಂ ನಾನಾತಗೆರ್ರಿತಾತಗೆ ನಮಿಪೇಂ|| | ||
1 | ಶ್ರೀಮದಮಲರೂಪ ಚಿನ್ಮಯಪ್ರದೀಪ | ಎರ್ರಿತಾತ |
2 | ಕಾಮಿತಾರ್ಥ ಸುಪ್ರದಾನ ಗುಣಕಲಾಪ | ಎರ್ರಿತಾತ |
3 | ನಿನ್ನ ಲೀಲೆಯರಿಯದವರು ಹುಚ್ಚರಾಗಿ | ಎರ್ರಿತಾತ |
4 | ನಿನ್ನ ಹುಚ್ಚನೆಂದು ಕರೆದರಮಳಯೋಗಿ | ಎರ್ರಿತಾತ |
5 | ನಿನ್ನ ಜನನದೆಡೆಯ ಕುರುಹು ತಿಳಿಯದೆಮಗೆ | ಎರ್ರಿತಾತ |
6 | ನಿನ್ನ ತಂದೆ ತಾಯಿಗಳಾರೊ ತಿಳಿಯದೆಮಗೆ | ಎರ್ರಿತಾತ |
7 | ನಿನ್ನ ಪಿತೃಗಳಿಟ್ಟ ಹೆಸರು ಗೊತ್ತದಿಲ್ಲ | ಎರ್ರಿತಾತ |
8 | ನಿನ್ನ ವಂಶಮತದ ಬಗೆಯನರಿದುದಿಲ್ಲ | ಎರ್ರಿತಾತ |
9 | ನಿನ್ನ ಜೀವನದ ಚರಿತ್ರವರಿಯಲಿಲ್ಲ | ಎರ್ರಿತಾತ |
10 | ನಿನ್ನ ಭಾವದಿಂಗಿತವನು ಶಿವನೆಬಲ್ಲ | ಎರ್ರಿತಾತ |
11 | ಬಾಲನಂತೆಯೊಮ್ಮೆಯಧಿಕಮತ್ತನಂತೆ | ಎರ್ರಿತಾತ |
12 | ಲೀಲೆವಿಡಿದು ಕಂಡಕಡೆಯೊಳಿರ್ದೆಯಂತೆ | ಎರ್ರಿತಾತ |
13 | ಒಂದು ಬಾವಿಯೊಳಗದೊಮ್ಮೆ ನೀನು ಮುಳುಗಿ | ಎರ್ರಿತಾತ |
14 | ಅಂದು ಬೇರೆ ಬಾವಿಯಿಂದ ಬಂದೆಯೋಗಿ | ಎರ್ರಿತಾತ |
15 | ಸಾಯಲೆಮ್ಮೆ ಕರುವದಕ್ಕೆ ಹರಣವಿತ್ತೆ | ಎರ್ರಿತಾತ |
16 | ತಾಯಿಮೊಲೆಯ ಹಾಲನಿತ್ತೆಯದಕೆ ಮತ್ತೆ | ಎರ್ರಿತಾತ |
17 | ಬಿದ್ದು ಸತ್ತ ಹದ್ದಕಂಡು ನೀನುದಯದೆ | ಎರ್ರಿತಾತ |
18 | ಎದ್ದು ಹೋಗಲುಸುರೆ ಪಾರಿಪೋಯ್ತುಜವದೆ | ಎರ್ರಿತಾತ |
19 | ಹುತ್ತ ದಂತಿಕದೊಳೆನಿಂತು ನಲಿವ ನಿನಗೆ | ಎರ್ರಿತಾತ |
20 | ಚಿತ್ತವಲರೆಬಂದು ಭಕ್ತನೋರ್ವ ನೆರಗೆ | ಎರ್ರಿತಾತ |
21 | ಮುಚ್ಚಿಸುತ್ತಲವನ ಕಣ್ಣಹುತ್ತದಿಂದೆ | ಎರ್ರಿತಾತ |
22 | ಕಚ್ಚದಂತೆ ಹಾವತೆಗೆದು ಮೋದದಿಂದೆ | ಎರ್ರಿತಾತ |
23 | ಮುಚ್ಚಿ ಭಕ್ತನವನ ಕಂಬಳಿಯೊಳಗದನು | ಎರ್ರಿತಾತ |
24 | ಬಿಚ್ಚದಂತೆ ಸದನ ಕೊಯ್ಯಲೊರೆಯುತದನು | ಎರ್ರಿತಾತ |
25 | ಎಚ್ಚರದೊಳು ಜಗಲಿಯಲ್ಲಿ ಪೂಜೆಗೈದು | ಎರ್ರಿತಾತ |
26 | ಬಿಚ್ಚಿನೋಡು ಕಂಬಳಿಯೊಳಗೆಂದು ನುಡಿದು | ಎರ್ರಿತಾತ |
27 | ಕಳುಹಲೊಂದಿ ತನ್ನ ಮನೆಯ ಭಕ್ತನವನು | ಎರ್ರಿತಾತ |
28 | ತಿಳುಹಿದಂತೆ ಗೈದು ಬಿಚ್ಚೆ ಕಂಬಳಿಯನು | ಎರ್ರಿತಾತ |
29 | ಹಾವು ಚಿನ್ನವಾಗಿ ತಾನು ಹೊಳದುದಂತೆ | ಎರ್ರಿತಾತ |
30 | ದೇವರಾದ ನಿನ್ನದಿಂತು ಲೀಲೆಯಂತೆ | ಎರ್ರಿತಾತ |
31 | ಸುವಿಮಳಾತ್ಮ ನೀನು ಹಳ್ಳಿಯೊಂದರಲ್ಲಿ | ಎರ್ರಿತಾತ |
32 | ಶಿವನ ಗುಡಿಯೊಳಿರುವ ಕಲ್ಲಬಸವನಲ್ಲಿ | ಎರ್ರಿತಾತ |
33 | ಇಟ್ಟು ಕೃಪೆಯ ನೀನು ಕರೆಯೆ ಬಸವನವನು | ಎರ್ರಿತಾತ |
34 | ನೆಟ್ಟನೊಲ್ದು ಬಂದನಂತೆ ಶಿವನೆ ನೀನು | ಎರ್ರಿತಾತ |
35 | ಇಂತದೆಂತೊ ಲೀಲೆಗಳನು ಮಾಡುತಿರ್ದು | ಎರ್ರಿತಾತ |
36 | ಚಿಂತಿತವನು ಭಕ್ತಜನರಿಗೀಯುತಿರ್ದು | ಎರ್ರಿತಾತ |
37 | ಕಡೆಗೆ ಚೇಳಗುರಿಕೆಯೂರೊಳಿರ್ದು ನೀನು | ಎರ್ರಿತಾತ |
38 | ಮೃಡನ ಸತ್ ಕ್ಷೇತ್ರವಾಗಿ ಮಾಡುತದನು | ಎರ್ರಿತಾತ |
39 | ಭಾವುಕರಿಗೆ ಭಾವದಲ್ಲಿ ಬ್ರಹ್ಮವಾಗಿ | ಎರ್ರಿತಾತ |
40 | ಭಾವಿಸಿದುದ ಕೊಟ್ಟೆಯಲ್ತೆ ದಾನಿಯಾಗಿ | ಎರ್ರಿತಾತ |
41 | ಕಾಮರಹಿತನಾದೊಡೇನು ನಂಬುವರಿಗೆ | ಎರ್ರಿತಾತ |
42 | ಕಾಮಿತವನು ಕೊಡುವ ಕಾಮವಿಹುದು ನಿನಗೆ | ಎರ್ರಿತಾತ |
43 | ಭಕ್ತಭಾವಕೊಲಿದ ಶಿವನ ಶಕ್ತಿ ನೀನು | ಎರ್ರಿತಾತ |
44 | ಮುಕ್ತನಾಗಿ ಭುಕ್ತಿಮುಕ್ತಿದಾತೃ ನೀನು | ಎರ್ರಿತಾತ |
45 | ಶಿವನ ಹುಚ್ಚು ನಿನ್ನದೆಂದು ನಂಬಿದವರು | ಎರ್ರಿತಾತ |
46 | ಶಿವನ ಸುಖವ ನಿನ್ನ ದಯದೆ ಪಡೆದರವರು | ಎರ್ರಿತಾತ |
47 | ಭುವಿಯೊಳಿವನು ಹುಚ್ಚನೆಂದು ಬೈದಜನರು | ಎರ್ರಿತಾತ |
48 | ಭವದ ದುಃಖವಹ್ನಿಯಲ್ಲಿ ಬೆಂದರವರು | ಎರ್ರಿತಾತ |
49 | ತಿಕ್ಕವೆಸರಿನಯ್ಯನೋರ್ವನಕ್ಕರೆಯೊಳು | ಎರ್ರಿತಾತ |
50 | ತಿಕ್ಕನಾಗಿ ಮೆರುವ ನಿನ್ನ ಸನ್ನಿಧಿಯೊಳು | ಎರ್ರಿತಾತ |
51 | ಬಂದು ನೆಲಸಿ ಬಂದನೆಲೆಯ ತಿಳಿಸದಂತೆ | ಎರ್ರಿತಾತ |
52 | ಹೊಂದಿ ನಿನ್ನ ಸೇವೆಯನ್ನು ತ್ಯಜಿಸದಂತೆ | ಎರ್ರಿತಾತ |
53 | ಮಾಡಿ ಭಿಕ್ಷೆ ಬೇಡಿತಂದು ನಿನಗೆ ಮಠವ | ಎರ್ರಿತಾತ |
54 | ಮಾಡುತಲ್ಲಿ ನಿನ್ನನಿರಿಸಿ ಭಕ್ತಕುಲವ | ಎರ್ರಿತಾತ |
55 | ಕೂಡಿಸುತ್ತೆ ನಿನ್ನ ಪೂಜೆಗೈಸಿ | ಎರ್ರಿತಾತ |
56 | ನಾಡದೇವರಾಗಿಸಿದನು ಭಕ್ತಿವಹಿಸಿ | ಎರ್ರಿತಾತ |
57 | ಇಂತುಗೈದ ತಿಕ್ಕಶಿಷ್ಯಗಚಲಸುಖವ | ಎರ್ರಿತಾತ |
58 | ಸಂತಸದೊಳು ಕರುಣಿಸುತ್ತೆ ಬಳಿಕ ಮಠವ | ಎರ್ರಿತಾತ |
59 | ಬಿಟ್ಟು ಹೋಗಲೊರೆದ ನಿನ್ನ ಮಾತಿನಂತೆ | ಎರ್ರಿತಾತ |
60 | ಹುಟ್ಟದಳಲ ಸಹಿಸುತೆಂತೊ ಪೋದನಂತೆ | ಎರ್ರಿತಾತ |
61 | ಆತನೊರೆದ ಭಕ್ತಿಮಯದ ಗೀತೆಗಳ | ಎರ್ರಿತಾತ |
62 | ಪ್ರೀತಿಯಿಂದ ಜನರು ಪಾಡುತಿರ್ದುರವನು | ಎರ್ರಿತಾತ |
63 | ಏಕೆಗೈದುದಿದರ ಗುಟ್ಟು ನಿನಗೆ ಗೊತ್ತು | ಎರ್ರಿತಾತ |
64 | ಸಾಕು ನಮ್ಮಗದರ ವಿಷಯವೆಂತುಗೊತ್ತು | ಎರ್ರಿತಾತ |
65 | ನಮ್ಮ ತಪ್ಪನಂತವದನು ನೋಡದಂತೆ | ಎರ್ರಿತಾತ |
66 | ನಮ್ಮ ಸಲಹು ನಿನ್ನ ಕೃಪೆಯನಂತವಂತೆ | ಎರ್ರಿತಾತ |
67 | ಬೆಂಗಳೂರ ಶುದ್ಧ ಭಕ್ತನೋರ್ವನಲ್ಲಿ | ಎರ್ರಿತಾತ |
68 | ತುಂಗ ಕೃಪೆಯುನಿಡುತಲೊಗೆವ ಕನಸಿನಲ್ಲಿ | ಎರ್ರಿತಾತ |
69 | ನಿನ್ನ ರೂಪುದೋರಲಾಸುಭಕ್ತವರನು | ಎರ್ರಿತಾತ |
70 | ತನ್ನ ಬಯಕೆಗಳನು ಬೇಡೆ ಕೊಟ್ಟು ನೀನು | ಎರ್ರಿತಾತ |
71 | ಇನ್ನು ಭಕ್ತನಾತನಧಿಕ ಸೇವೆಯಾಂತು | ಎರ್ರಿತಾತ |
72 | ಉನ್ನತಿಯನು ನಿನ್ನ ಮಠವು ಪಡೆದುದಿಂತು | ಎರ್ರಿತಾತ |
73 | ನಿನ್ನ ಸೇವೆಗಾಗಿ ನಿನ್ನ ಮಠವಿದೆಂದು | ಎರ್ರಿತಾತ |
74 | ನಿನ್ನ ಮೂರ್ತಿ ಮಾಡಿ ಪೂಜೆಗಿಟ್ಟೆವಿಂದು | ಎರ್ರಿತಾತ |
75 | ಮಠದೊಳಿಲ್ಲ ನಿನ್ನ ನಿಜದಮೂರ್ತಿ ನೋಡೆ | ಎರ್ರಿತಾತ |
76 | ದಿಟದ ಭಕ್ತರೆದೆಯೊಳೊಪ್ಪತಿಹುದುನಾಡೆ | ಎರ್ರಿತಾತ |
77 | ಯಾರು ಬಾವಿತೋಡಿಸಿದೊಡಮಾವಕಡೆಗೆ | ಎರ್ರಿತಾತ |
78 | ನೀರನಿನಿತು ಕಾಣದಂತೆ ಕಷ್ಟವಾಗೆ | ಎರ್ರಿತಾತ |
79 | ಆಮಹಾ ಬಳ್ಳಾರಿಯೋರ್ವ ಭಕ್ತನಲ್ಲಿ | ಎರ್ರಿತಾತ |
80 | ಸ್ವಾಮಿ ನೀನು ಕೃಪೆಯ ತೋರಿ ಶೀಘ್ರದಲ್ಲಿ | ಎರ್ರಿತಾತ |
81 | ನಿಗಮನುತನೆ ನಿನ್ನ ಮಠದೊಳಾತನಿಂದ | ಎರ್ರಿತಾತ |
82 | ಅಗಿಸೆ ಬಾವಿಯದರ ಸವಿಯ ನೀರಿನಿಂದ | ಎರ್ರಿತಾತ |
83 | ಬರುವ ಜನರಿಗಾಗುತಿರ್ದ ನೀರ ಬರುವ | ಎರ್ರಿತಾತ |
84 | ಹರಿದು ಜನರಿಗಾಯ್ತು ನಿನ್ನ ಲೀಲೆಯರಿವು | ಎರ್ರಿತಾತ |
85 | ನಿನ್ನ ನಂಬಿದವರಿಗಿಲ್ಲ ಬಡತನವದು | ಎರ್ರಿತಾತ |
86 | ನಿನ್ನ ಪೂಜಿಸುವರ ರೋಗಬಾಧೆಯಿರದು | ಎರ್ರಿತಾತ |
87 | ನಿನ್ನ ಸೇವಿಸುವರ ವಂಶವೃದ್ಧಿಯಾಯ್ತು | ಎರ್ರಿತಾತ |
88 | ನಿನ್ನ ನೆನೆವ ಜನರ ಮನಕೆ ಶಾಂತಿಯಾಯ್ತು | ಎರ್ರಿತಾತ |
89 | ಉಳ್ಳವರ್ಕಳೈದೆ ನಿನಗೆ ಕೊಟ್ಟ ಧನವ | ಎರ್ರಿತಾತ |
90 | ಇಲ್ಲದವರು ಕದಿಯಲದನು ನೋಡಿನಗುವ | ಎರ್ರಿತಾತ |
91 | ಬೇಕು ಬೇಡವೆಂಬೆರಡ ಬಿಟ್ಟಗುರುವೆ | ಎರ್ರಿತಾತ |
92 | ಲೋಕದಖಿಳಭಕ್ತ ಜನರಿಗಮರ ತರುವೆ | ಎರ್ರಿತಾತ |
93 | ಶರಣನಿವಹ ಹೃದಯ ಕಮಲಭಾನು ನೀನು | ಎರ್ರಿತಾತ |
94 | ಚರಣಸೇವಕರಿಗೆ ಕಾಮಧೇನು ನೀನು | ಎರ್ರಿತಾತ |
95 | ನಿನ್ನಲಸದನು ಸುಶಕ್ತಿ ನೋಡೆ | ಎರ್ರಿತಾತ |
96 | ನಿನ್ನ ಬಳಿಗೆ ನಮ್ಮ ನೆಳೆವುದಲ್ತೆನಾಡೆ | ಎರ್ರಿತಾತ |
97 | ನಿನಗೆ ಚಿನ್ನದಂತೆಮೈಯ ಬಣ್ಣವಿದ್ದು | ಎರ್ರಿತಾತ |
98 | ಮಿನುಗುತಿರ್ದುದಂತೆ ಶಿವನ ಬೆಳಗಹೊದ್ದು | ಎರ್ರಿತಾತ |
99 | ನಿನ್ನ ಬಿಳಿಯ ಜಡೆಯು ಮುದ್ದುಗಡ್ಡ ಮೀಸೆ | ಎರ್ರಿತಾತ |
100 | ಇನ್ನು ನೋಡಲೊಗೆವುದಲ್ತೆ ನಮಿಸುವಾಶೆ | ಎರ್ರಿತಾತ |
101 | ಕುರುಡ ಕುಂಟ ಜನಕ್ಕೆ ಕಣ್ಣ ಕಾಲನಿತ್ತ | ಎರ್ರಿತಾತ |
102 | ಬರಡು ಹಯನವಾಗಿಸಿರ್ದ ಮಹಿತ ಚಿತ್ತ | ಎರ್ರಿತಾತ |
103 | ಜಯವು ಜನಮನೋ ಮುದಾಬ್ಧಿ ಚಂದ್ರ ನಿನಗೆ | ಎರ್ರಿತಾತ |
104 | ಜಯವು ಜನನದೂರ ಸುಗುಣಸಾಂದ್ರ ನಿನಗೆ | ಎರ್ರಿತಾತ |
105 | ಜಯವು ಚೇಳ್ಳಗುರಿಕೆಯಮಳ ಮಠದೊಳಿರುವ | ಎರ್ರಿತಾತ |
106 | ಜಯವು ಭಕ್ತರಮಳಮನದ ಮನೆಯೊಳಿರುವ | ಎರ್ರಿತಾತ |
107 | ವಂದಿಸುವೆವು ನಿನ್ನ ಪಾದಪಂಕಜಕ್ಕೆ | ಎರ್ರಿತಾತ |
108 | ವಂದಿಸುವೆವು ನಿನ್ನ ಕೃಪೆಯು ನಮ್ಮೊಳಿರ್ಕೆ | ಎರ್ರಿತಾತ |
||ಕಂ||ಭೂಮಿಯೊಳಾರಾರೆರ್ರಿ | ||
ಸ್ವಾಮಿಯ ನೂರೆಂಟು ವಿಮಳತರನಾಮಗಳಂ || | ||
ಪ್ರೇಮದೆ ಪಠಿಸುವರನು ದಿನ | ||
ಮಾಮನಜರ್ಗಿಷ್ಟ ಸಿದ್ದಿಯಕ್ಕುಂ ನಿಸದಂ || | ||
- ಇತಿ ಶಿವಂ- |